ನನ್ನ ಹೇಳಿಕೆ ತಿರುಚಿ ಅಪಪ್ರಚಾರ: ಬಿಜೆಪಿಯವರಂತಹ ಕೊಳಕರು, ಜಾತಿವಾದಿಗಳು ಇನ್ಯಾರೂ ಇಲ್ಲ- ಸಿದ್ಧರಾಮಯ್ಯ ಕಿಡಿ

 

ಮಂಡ್ಯ,ನವೆಂಬರ್,8,2021(www.justkannada.in): ಬಿಜೆಪಿಯವರಂತಹ ಕೊಳಕರು, ಜಾತಿವಾದಿಗಳು ಇನ್ಯಾರೂ ಇಲ್ಲ.‌ ಸಂವಿಧಾನ ಬದಲಾವಣೆ ಮಾಡ್ತೀನಿ ಎಂದು ಹೇಳಿದವರ ಪಕ್ಷಕ್ಕೆ ಹಲವರು ಹೋಗ್ತಿದ್ದಾರೆ. ಎಂದು ನಾನು ಭಾಷಣ ಮಾಡಿದ್ದೆ. ಆದರೆ ಬಿಜೆಪಿಯವರು ನನ್ನ ಹೇಳಿಕೆ ತಿರುಚಿ ಅಪಪ್ರಚಾರ ಮಾಡ್ತಿದ್ದಾರೆ. ಇದನ್ನೇ ಕೆಟ್ಟದ್ದಾಗಿ ಹೇಳಿಕೊಂಡು ನನ್ನ ವಿರುದ್ಧ ಹೋರಾಟ ಮಾಡಿದ್ದಾರೆ. ಹೀಗಾಗಿ ನೀವು ಅವರ ಬಗ್ಗೆ ಹುಷಾರಾಗಿರಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.

ಮಂಡ್ಯದ ಕನಕ ಭವನದ ಆವರಣಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವರಸಿದ್ಧಿ ವಿನಾಯಕ ದೇವಾಲಯ ಹಾಗೂ ಅತಿಥಿ ಗೃಹ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ  ಹೇಳಿದ್ದಿಷ್ಟು..

ನನ್ನ ಪ್ರತಿಕೃತಿ ಸುಟ್ಟ ತಕ್ಷಣ ನಾನು ಸುಟ್ಟೋಗಲ್ಲ ನನ್ನ ಜನ, ನನ್ನ ಪ್ರೀತಿಸುವವರು ಸುಟ್ಟೋಗಲ್ಲ. ಎಲ್ಲರೂ ಸಮಾನವಾಗಿರಬೇಕು. ಜಾತಿ ವ್ಯವಸ್ಥೆ ಸಮಾಜದಿಂದ ದೂರವಾಗಬೇಕು. ಮನುಷ್ಯರಾಗಿ, ಸಮಾನರಾಗಿ ಬದುಕುವಂತಾಗಬೇಕು. ಬಹಳ ಜನ ಬುದ್ಧಿಹೀನರು ಟೀಕೆ ಮಾಡ್ತಾರೆ.  ಸಿದ್ದರಾಮಯ್ಯ ಕುರುಬ ಸಮಾಜಕ್ಕೆ ಏನು ಕೊಟ್ಟ ಅಂತಾರೆ. ಒಂದು ಜಾತಿಯಲ್ಲಿ ಮಾತ್ರ ಬಡವ, ಶ್ರೀಮಂತ ಇಲ್ಲ. ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ಮುಖ್ಯಮಂತ್ರಿಯಾಗಿ ಒಂದು ಸಮಾಜದ ಅಭಿವೃದ್ಧಿ ಬಯಸಲು ಸಾಧ್ಯವೇ ? ಎಂದು ಪ್ರಶ್ನಿಸಿದರು.

ಹೀಗಾಗಿ ಎಲ್ಲಾ ಜಾತಿಯ ಬಡವರ ಅಭಿವೃದ್ಧಿ ಆಗಬೇಕು. ನಾನು ಕೊಟ್ಟ ಯೋಜನೆಗಳು ಒಂದು ಜಾತಿಗೆ ಸೀಮಿತವಾಗಿಲ್ಲ.  ಅವಕಾಶದಿಂದ ವಂಚಿತರಾದವರ ಪರ ನಾನು ಕೆಲಸ ಮಾಡಿದ್ದೇನೆ. ಆದರೂ ಸಿದ್ದರಾಮಯ್ಯ ಜಾತಿ ಮಾಡ್ತಾನೆ ಅಂತಾರೆ. ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮ, ಟಿಪ್ಪು, ಭಗೀರಥ, ಕೃಷ್ಣ, ವೇಮನ ಮತ್ತಿತರರ ಜಯಂತಿ ಮಾಡಿದ್ದು ನಾನು. ಆದರೂ ನನ್ನನ್ನು ಜಾತಿ ಜಾತಿ ಅಂತಾರೆ.

ಜಾತಿ ಮಾಡುವ ಕೊಳಕು ಮನಸ್ಸಿನವರು ನನ್ನ ವಿರುದ್ಧ ಆರೋಪ ಮಾಡ್ತಾರೆ.ಅರಸು ನಂತರ 5 ವರ್ಷ ಪೂರ್ಣಾವಧಿ ಆಡಳಿತ ಮಾಡಿದ್ದು ನಾನು. ಹೀಗಾಗಿ ಅವರಿಗೆ ಹೊಟ್ಟೆ ಕಿಚ್ಚು. ಹೊಟ್ಟೆ ಕಿಚ್ಚಿಗಾಗಿ ಈ ರೀತಿ ಆರೋಪ ಮಾಡ್ತಾರೆ.

ಕುರುಬರ ಸಂಘದ ಕಾರ್ಯಕ್ರಮದಲ್ಲಿ ಇತರೆ ಜಾತಿಯವರು ನನ್ನ ಜೊತೆ ಇದ್ದಾರೆ. ಒಕ್ಕಲಿಗರು ಬಹಳಷ್ಟು ಜನ ಜೊತೆ ಬಂದಿದ್ದಾರೆ. ಆದರೂ ಕೆಲವರು ನನ್ನ ಒಕ್ಕಲಿಗರ ವಿರೋಧಿ ಅಂತಾರೆ.ಬಿಜೆಪಿಯವರು ಹಿಂದುಳಿದ ಜಾತಿಗಳ ವಿರೋಧಿಗಳು. ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕೊಟ್ಟಿದ್ದು ನಾವು. 1994ರಲ್ಲಿ ರಾಜಕೀಯ ಮೀಸಲಾತಿ ಕೊಟ್ಟೆವು. ಹಾಗಾಗಿ ಇವತ್ತು ಬಿಸಿಎಂ-ಎ, ಬಿ ಮೀಸಲಾತಿಯಿಂದ ಹಲವರು ಗೆದ್ದಿದ್ದಾರೆ. ನಾವು ಕೊಟ್ಟ ಮೀಸಲಾತಿ ವಿರುದ್ಧ ಬಿಜೆಪಿಯವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಅವರ ಮನವಿಗೆ ವಿರುದ್ಧ ತೀರ್ಪು ಕೊಟ್ಟಿತು. ನಮ್ಮ ಆದೇಶವನ್ನ ಎತ್ತಿ ಹಿಡಿಯಿತು ಎಂದರು.

ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಿ.

ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ಬಡವರ ಪರ ಯೋಜನೆ ಬೇಕು ಅಂದ್ರೆ.ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ.  ಜಿಲ್ಲೆಯಲ್ಕಿ ಕಾಂಗ್ರೆಸ್ ಗೆಲ್ಲಬೇಕು.ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು. ಕೇವಲ ಘೋಷಣೆ ಕೂಗಿದರೆ ಸಾಲದು. ಕಾಂಗ್ರೆಸ್ ಗೆ ವೋಟ್ ಮಾಡಿ, ಗೆಲ್ಲಿಸಬೇಕು.ಮತ್ತೆ ನಮ್ಮ ಸರ್ಕಾರವೇ ಬರುವ ವಾತಾವರಣ ಶುರುವಾಗ್ತಿದೆ. ‌ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ. ಮತ್ತೆ ನಮ್ಮದೇ ಸರ್ಕಾರ ಬರುತ್ತೋ? ಇಲ್ವೋ? ಎಂಬ ಪ್ರಶ್ನೆಯನ್ನು ಸಭಿಕರ ಮುಂದೆ ಇಟ್ಟಾಗ ಹೌದೋ ಹುಲಿಯಾ ಎಂಬ ಉತ್ತರ ಬಂತು.

Key words: My statement – misunderstanding-BJP-formerCM- Siddaramaiah