ಆರ್ ಎಸ್ ಎಸ್ ಕೆಲಸ ಸಮಾಜ ಸೇವೆಯೋ ಅಥವಾ ರಾಜಕೀಯವೋ? ಅಥವಾ ಹಣ ಮಾಡುವುದೋ? – ಬಿಜೆಪಿಗೆ ಜೆಡಿಎಸ್ ತಿರುಗೇಟು.

ಬೆಂಗಳೂರು,ಅಕ್ಟೋಬರ್,20,2021(www.justkannada.in):  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಗ್ಗೆ ವೈಯಕ್ತಿಕವಾಗಿ ಟೀಕಿಸಿದ ಬಿಜೆಪಿಗೆ ಜೆಡಿಎಸ್ ರಾಜ್ಯ ಘಟಕ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿದೆ.

ಈ ಕುರಿತು ಟ್ವಿಟ್ ಮಾಡಿರುವ ಜೆಡಿಎಸ್, ಸದನದಲ್ಲಿಯೇ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡುವ ಎದೆಗಾರಿಕೆ ತೋರಿದ ಅವರೆಲ್ಲಿ? ಅದೇ ಸದನದಲ್ಲಿ ನೀಚ ಕೃತ್ಯ ಎಸಗಿದ ಬಿಜೆಪಿ ನಾಯಕರು ಎಲ್ಲಿ? ಎಂದು ಟಾಂಗ್ ನೀಡಿದೆ.

ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಆರ್.ಎಸ್.ಎಸ್ ಬಗ್ಗೆ ಕೆಲ ಮೂಲಭೂತ ಪ್ರಶ್ನೆಗಳನ್ನು ಎತ್ತಿದ್ದರು. ಅವು ಸತ್ಯವೂ, ಜನರಿಗೆ ತಿಳಿಯಲೇಬೇಕಾದ ತುರ್ತು ಅಂಶಗಳೂ ಹೌದು. ಇವುಗಳಲ್ಲಿ ಐಎಎಸ್ ಅಧಿಕಾರಿಗಳಿಗೆ ಸಂಘದ ವತಿಯಿಂದ ತರಬೇತಿ ನೀಡಿ ಕಳಿಸಿದೆ ಎನ್ನುವುದೂ ಒಂದು ಅಂಶ, ಇರಲಿ.

ಆರ್.ಎಸ್.ಎಸ್ ಎನ್ನುವುದು ಅಧಿಕೃತ ಸಂಸ್ಥೆಯೇ? ಅದು ಎಲ್ಲಿ? ಯಾವಾಗ ನೋಂದಣಿ ಆಗಿದೆ? ಅದರ ಅಧಿಕೃತ ಕಚೇರಿ ಎಲ್ಲಿದೆ? ಅದರ ಕೆಲಸ ಸಮಾಜ ಸೇವೆಯೋ ಅಥವಾ ರಾಜಕೀಯವೋ? ಅಥವಾ ಹಣ ಮಾಡುವುದೋ? ಎಂದು ಜೆಡಿಎಸ್ ಪ್ರಶ್ನಿಸಿದೆ.

ಗುರುದಕ್ಷಣೆ ಸೇರಿದಂತೆ ದೇಶ-ವಿದೇಶಗಳಿಂದ ಕೋಟ್ಯಂತರ ರೂಪಾಯಿ ದೇಣಿಗೆ ಬರುತ್ತಿದೆ. ಅದಕ್ಕೆ ಸಂಘ ಲೆಕ್ಕ ಕೊಟ್ಟಿದಿಯಾ? ತನ್ನ ವಹಿವಾಟಿನ ಬಗ್ಗೆ ಬ್ಯಾಲನ್ಸ್ ಶೀಟ್ ಇಟ್ಟುಕೊಂಡಿದೆಯಾ? ಅದನ್ನು ಪರಿಶೀಲನೆ ಮಾಡಿದ ಲೆಕ್ಕ ಪರಿಶೋಧಕರು ಯಾರು? ಶಾಲೆಗಳಲ್ಲಿ ಬಾಲ ಸ್ವಯಂ ಸೇವಕರ ಬ್ರೈನ್ ವಾಶ್ ಮಾಡುತ್ತಿರುವುದು ಸುಳ್ಳೇ?

ಶಿಕ್ಷಣ ಕೊಡುವ ನೆಪದಲ್ಲಿ ಮತಾಂಧತೆಯ ವಿಷಪ್ರಾಶನ ಮಾಡುತ್ತಿರುವುದು ಪೊಳ್ಳಾ? ಸಂಘದ ಶಾಖೆಗಳಲ್ಲಿ ತ್ರಿಶೂಲ, ಖಡ್ಗದಂಥ ಆಯುಧಗಳನ್ನು ಇಡುವುದು ಅಕ್ರಮ. ಇದಕ್ಕೆ ಪರವಾನಗಿ ಪಡೆಯಲಾಗಿದೆಯಾ? ಇಂಥ ಹಲವು ಪ್ರಶ್ನೆಗಳನ್ನು ಕುಮಾರಸ್ವಾಮಿ ಅವರು ಕೇಳಿದ್ದರು. ಈ ಪ್ರಶ್ನೆಗಳಿಗೆ ಉತ್ತರ ಕೊಡುವ ಎದೆಗಾರಿಕೆಯನ್ನು ಬಿಜೆಪಿ ತೋರಲಿಲ್ಲ, ಯಾಕೆ? ಎಂದು ಜೆಡಿಎಸ್ ಪ್ರಶ್ನಿಸಿದೆ.

ಪಟ್ಟಿ ಮಾಡಿ ಕುಮಾರಸ್ವಾಮಿ ಅವರನ್ನು ಕೆಣಕಿರುವ ಬಿಜೆಪಿ, ಸಂಘದ ಕಾನೂನು- ಸಂವಿಧಾನ ವಿರೋಧಿ ಕೃತ್ಯಗಳ ಬಗ್ಗೆ ಯಾಕೆ ಮೌನ ವಹಿಸಿದೆ ? ನಮ್ಮ ದೇಶದಲ್ಲಿ ಸಂವಿಧಾನ ವಿರೋಧಿಗಳನ್ನು ದೇಶದ್ರೋಹಿಗಳು ಎಂದು ಕರೆಯಲಾಗುತ್ತದೆ. ಹಾಗಾದರೆ, ಆರ್ ಎಸ್ ಎಸ್ ಅನ್ನು ಏನೆಂದು ಕರೆಯಬೇಕು?

ಮಾಜಿ ಮುಖ್ಯಮಂತ್ರಿಗಳು ಎತ್ತಿದ್ದು ವೈಯಕ್ತಿಕ ವಿಷಯಗಳನ್ನೆಲ್ಲ, ಆದರೆ ಬಿಜೆಪಿ ಅವರ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸಿದೆ. ಸದನದಲ್ಲಿಯೇ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡುವ ಎದೆಗಾರಿಕೆ ತೋರಿದ ಕುಮಾರಸ್ವಾಮಿ ಅವರೆಲ್ಲಿ? ಅದೇ ಸದನದಲ್ಲಿ ನೀಚ ಕೃತ್ಯ ಎಸಗಿದ ಬಿಜೆಪಿ ನಾಯಕರು ಎಲ್ಲಿ? ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಜೆಡಿಎಸ್ ತಿರುಗೇಟು ನೀಡಿದೆ.

Key words: RSS -Work -Social Service or Politics? – making money-JDS – BJP