ಅಶೋಕ್ ಅಂತ ಅವರ ಅಪ್ಪ, ಅಮ್ಮ ಯಾಕೆ ಹೆಸರಿಟ್ರೋ ಸಾಮ್ರಾಟ್ ರೀತಿಯೇ ಆಡ್ತಾರೆ- ಸಚಿವ ಆರ್.ಅಶೋಕ್ ವಿರುದ್ದ ವಿ.ಸೋಮಣ್ಣ  ಗುಡುಗು.

ಬೆಂಗಳೂರು,ಅಕ್ಟೋಬರ್,9,2021(www.justkannada.in): ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ಸಚಿವ ವಿ.ಸೋಮಣ್ಣ  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ಆರ್.ಅಶೋಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಚಿವ ವಿ.ಸೋಮಣ್ಣ, ನಾನು ಸಚಿವ ಆಗಿದ್ದಾಗ ಆರ್. ಅಶೋಕ್ ಇನ್ನೂ ಶಾಸಕನಾಗಿದ್ದ. ನಾನು ಕರೆದಿದ್ದ ಸಭೆಗೆ ಸಚಿವ ಆರ್.ಅಶೋಕ್ ಬಂದಿರಲಿಲ್ಲ. ಅವರು ಸಭೆ ಕರೆದರೆ ನಾನು ಹೋಗುತ್ತೀನಿ. ನಾನು ಸಭೆ ಕರೆದರೆ ಅವರು ಬರಬೇಕು. ಬಂದಿಲ್ಲ ಅಂದ್ರೆ ಅವರಿಗೇ ಲಾಸ್. ಮನೆಗಳನ್ನು ನಮ್ಮ ಕಾರ್ಯಕರ್ತರಿಗೆ ಕೊಡುತ್ತೇನೆ ಅಷ್ಟೆ. ನಾನು ಸೀನಿಯರ್ ಇದ್ದೇನೆ. ಅಶೋಕ್ ಅಂತ ಅವರ ಅಪ್ಪ, ಅಮ್ಮ ಯಾಕೆ ಹೆಸರಿಟ್ರೋ. ಆರ್.ಅಶೋಕ್ ಸಾಮ್ರಾಟ್ ರೀತಿಯೇ ಆಡುತ್ತಾನೆ ಎಂದು ಗುಡುಗಿದರು.

ಬೆಂಗಳೂರು ನಗರ ಉಸ್ತುವಾರಿ ಕುರಿತು ಪ್ರತಿಕ್ರಿಯಿಸಿದ ಸಚಿವ ವಿ.ಸೋಮಣ್ಣ, ಉಸ್ತುವಾರಿಯನ್ನು ಯಾರಿಗೆ ಬೇಕಾದರೂ ಕೊಡಲಿ. ಆದರೆ ಉಸ್ತುವಾರಿ ಕೊಡುವಾಗ ಜ್ಯೇಷ್ಠತೆ ಪರಿಗಣಿಸಲಿ. ನಾನು ಬೆಂಗಳೂರಿನ ಹಿರಿಯ ಸಚಿವ. ನನ್ನನ್ನು ಪರಿಗಣಿಸಿ ಎಂದು ಸಿಎಂ ಬೊಮ್ಮಾಯಿಗೆ ಕೇಳಿದ್ದೇನೆ. ಉಸ್ತುವಾರಿ ಸಿಎಂ ಬಳಿ ಇದ್ದರೆ ನಮ್ಮ ಅಭ್ಯಂತರ ಇಲ್ಲ. ಬೇರೆಯವರಿಗೆ ಕೊಟ್ಟರೆ ನನ್ನನ್ನು ಪರಿಗಣಿಸಿ ಎಂದು ಕೇಳಿದ್ದೇನೆ ಅಂತ ವಿ.ಸೋಮಣ್ಣ ಹೇಳಿದರು.

Key words: minister-  V. Somanna – against-Minister -R. Ashok.