12 ಗಂಟೆಯಲ್ಲೇ ಆರೋಪಿಗಳು ಪೊಲೀಸ್ ಬಲೆಗೆ
ಬೆಂಗಳೂರು ; ಕಾಮ ಚಟಕ್ಕೆ ಬಿದ್ದು ತನ್ನ ಪ್ರಾಣಕ್ಕೇ ಕುತ್ತು ತಂದುಕೊಂಡ ತಮಿಳುನಾಡಿನ ಖ್ಯಾತ ವಕೀಲರೊಬ್ಬರ ಕೊಲೆ ರಹಸ್ಯವನ್ನು ಕಬ್ಬನ್ಪಾರ್ಕ್ ಪೊಲೀಸರು ಘಟನೆ ನಡೆದ ಕೇವಲ 12 ಗಂಟೆಗಳಲ್ಲಿ ಪತ್ತೆ ಹಚ್ಚಿದ್ದಾರೆ.
ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ರಾಯಪುರಂನ ವಕೀಲ ಅಪ್ಪುಸ್ವಾಮಿ (59) ಕೊಲೆಯಾದವರು. ಈ ಪ್ರಕರಣದಲ್ಲಿ ಪೊಲೀಸ್ ಪೇದೆ ಸೇರಿ ಮೂವರನ್ನು ಬಂಧಿಸಲಾಗಿದೆ.
ಪ್ರಮುಖ ಆರೋಪಿ ಚಾಮರಾಜನಗರದ ಗಾಡಿಖಾನಾ ಮೊಹಲ್ಲಾದ ಮೊಹ್ಮದ್ ಜುನೈದ್ (25), ಈತನ ಸ್ನೇಹಿತರಾದ ಮಂಡ್ಯ ಜಿಲ್ಲೆ ತಾವರೆಕೆರೆಯ ಯಶವಂತ (22) ಹಾಗೂ ಡಿಎಆರ್ ಪೇದೆ, ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಗ್ರಾಮದ ಗಿರೀಶ್ (24) ಬಂಧಿತರು. ಆರೋಪಿ ಯಶವಂತ ಮಂಡ್ಯದಲ್ಲಿ ಎರಡನೇ ವರ್ಷದ ಎಲ್ಎಲ್ಬಿ ವ್ಯಾಸಂಗ ಮಾಡುತ್ತಿದ್ದ. ಆರೋಪಿಗಳಿಂದ ಕಾರು, ಎಟಿಎಂ ಕಾರ್ಡ್ , ಮೊಬೈಲ್ಫೋನ್ ವಶಪಡಿಸಿಕೊಳ್ಳಲಾಗಿದೆ.
ತಮಿಳುನಾಡಿನ ಕುನ್ನತ್ತೂರು ಪೊಲೀಸರು ನಗರದ ಕಬ್ಬನ್ಪಾರ್ಕ್ ಪೊಲೀಸರನ್ನು ಭಾನುವಾರ ಸಂಜೆ ಸಂಪರ್ಕಿಸಿ ವಕೀಲ ನಾಪತ್ತೆ ಹಾಗೂ ಚರ್ಚ್ ಸ್ಟ್ರೀಟ್ನಲ್ಲಿರುವ ಎಟಿಎಂನಿಂದ ಹಣ ಡ್ರಾ ಮಾಡಿರುವ ಕುರಿತು ತಿಳಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಕಬ್ಬನ್ಪಾರ್ಕ್ ಉಪವಿಭಾಗದ ಎಸಿಪಿ ಡಿ. ದೇವರಾಜ್, ಇನ್ಸ್ಪೆಕ್ಟರ್ ಬದರಿನಾಥ್, ಸಬ್ಇನ್ಸ್ಪೆಕ್ಟರ್ ರವಿ.ಕೆ.ಬಿ., ಭರತ್ ಬಿ, ಗಿರೀಶ್ ಎ.ಕೆ. ಹಾಗೂ ಸಿಬ್ಬಂದಿ ಕಾರ್ಯಚರಣೆ ಆರಂಭಿಸಿದಾಗ ಕೊಲೆ ರಹಸ್ಯ ಬಯಲಾಗಿದೆ.
* ನಕ್ಕೀರನ್ ಗೋಪಾಲ್ ಪರ ವಕೀಲ :
ತಮಿಳುನಾಡಿನ ನಕ್ಕಿರನ್ ಪತ್ರಿಕೆಯ ಸಂಪಾದಕ ಗೋಪಾಲ್ ಪರ ವಕೀಲರಾಗಿದ್ದ ಅಪ್ಪುಸ್ವಾಮಿ, ವಕೀಲರಾಗಿ ಖ್ಯಾತಿ ಗಳಿಸಿದ್ದರು. ಇವರ ಸಂಬಂಧಿ ಕೊಯಮತ್ತೂರಿನ ಎಂ.ಪಿ.ಯಾಗಿದ್ದರು.
ಆರೋಪಿ ಮೊಹ್ಮದ್ ಜುನೈದ್ ಅಪರಾಧ ಹಿನ್ನೆಲೆಯುಳ್ಳವನು. ಉಮಾಯಿನ್ ಎಂಬಾತನ ಜತೆ ಸೇರಿ 2010ರಲ್ಲಿ ಮೈಸೂರು ಹಾಗೂ ತಮಿಳುನಾಡಿನಲ್ಲಿ ದರೋಡೆ, ಕೊಲೆಯತ್ನ, ಸುಲಿಗೆ ಮತ್ತಿತರ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮೈಸೂರಿನಲ್ಲಿದ್ದ ಉಮಾಯಿನ್ 2010ರಲ್ಲಿ ಹತ್ಯೆಯಾದ. ಬಳಿಕ ಜುನೈದ್ನನ್ನು ಎರಡು ಪ್ರಕರಣಗಳಲ್ಲಿ ತಮಿಳುನಾಡಿನ ತಾಳವಾಡಿ ಪೊಲೀಸರು ಬಂಧಿಸಿದ್ದರು. ನಂತರ ಆತನನ್ನು ತಿರುಪ್ಪೂರು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆಗ ಆರೋಪಿ ಪರ ವಕಾಲತ್ತು ವಹಿಸಿದವರೇ ಈ ವಕೀಲ ಅಪ್ಪುಸ್ವಾಮಿ. ನ್ಯಾಯಾಲಯದಲ್ಲಿ ವಾದ ಮಂಡಿಸಿ ಜುನೈದ್ನ ಕೇಸ್ಗಳನ್ನು ಖುಲಾಸೆಗೊಳಿಸಿದ್ದರು. ಇದರಿಂದಾಗಿ ಅವರಿಬ್ಬರ ಮಧ್ಯೆ ಆತ್ಮೀಯತೆ ಬೆಳೆಯಿತು.
ಈ ಮಧ್ಯೆ ಅಪ್ಪುಸ್ವಾಮಿ ಪತ್ನಿಗೆ ವಿಚ್ಛೇದನ ನೀಡಿ, ಹುಡುಗಿಯರ ಚಟಕ್ಕೆ ಬಿದ್ದಿದ್ದರು. ಜುನೈದ್ ಆಗಾಗ ಮೈಸೂರಿಗೆ ಕರೆಸಿ ಹುಡುಗಿಯರನ್ನು ಸರಬರಾಜು ಮಾಡಿ ಹಣ ಕೀಳುತ್ತಿದ್ದ.
ದಿಢೀರ್ ಶ್ರೀಮಂತನಾಗಲು ನಿರ್ಧರಿಸಿದ ಜುನೈದ್, ವಕೀಲರ ಹತ್ಯೆಗೆ ಸಂಚು ರೂಪಿಸಿದ. ಮೈಸೂರಿನ ಉದಯಗಿರಿ ಬಳಿ ಸುಂದರ ಹುಡುಗಿ ಇದ್ದಾಳೆ ಎಂದು ನಂಬಿಸಿ ಅಪ್ಪುಸ್ವಾಮಿ ಅವರನ್ನು ಫೆ.11ರಂದು ಮೈಸೂರಿಗೆ ಕರೆಸಿಕೊಂಡ. ಉದಯಗಿರಿಯಲ್ಲಿರುವ ಹುಡುಗಿ ಮನೆಯೊಂದಕ್ಕೆ ಅಂದು ರಾತ್ರಿ ಕರೆದೊಯ್ದು ಹಣ ಕೇಳಿದ್ದಾನೆ. ಆಗ ಹಣದ ವಿಷಯಕ್ಕೆ ಜಗಳ ನಡೆದಿದೆ. ಆ ಮನೆಯಲ್ಲೇ ಅಪ್ಪುಸ್ವಾಮಿಗೆ ಥಳಿಸಿದ್ದಾನೆ. ಅವರು ಪ್ರಜ್ಞೆ ಕಳೆದುಕೊಂಡಾಗ, ಜುನೈದ್ ತನ್ನ ಸ್ನೇಹಿತರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಬಳಿಕ ಮೂವರು ಸೇರಿ ಅಪ್ಪುಸ್ವಾಮಿ ಅವರ ಹೋಂಡಾಸಿಟಿ ಕಾರಿನಲ್ಲೇ ಹಾಕಿಕೊಂಡು ಹಗ್ಗದಿಂದ ಕೈ ಕಾಲು ಕಟ್ಟಿ ಮತ್ತು ಹೊಟ್ಟೆಗೆ ಕಲ್ಲು ಕಟ್ಟಿ ಮಂಡ್ಯ ಸಮೀಪದಲ್ಲಿರುವ ಕೊಳಚೆ ನೀರಿನ ನಾಲೆಗೆ ಎಸೆದಿದ್ದರು. ಬಳಿಕ ಕಾರು, ಮೊಬೈಲ್ ಹಾಗೂ ಎಟಿಎಂ ಕಾರ್ಡ್ ಗಳ ಸಮೇತ ನಾಪತ್ತೆಯಾಗಿದ್ದರು.
* ನಾಪತ್ತೆ ಪ್ರಕರಣ :
ತಿರುಪ್ಪೂರು ಜಿಲ್ಲೆಯ ಕುನ್ನತ್ತೂರು ಠಾಣೆಯಲ್ಲಿ ಫೆ.12ರಂದು ನಾಪತ್ತೆ ಪ್ರಕರಣ ದಾಖಲಾಗಿತ್ತು. ಆದರೆ, ವಕೀಲರ ಸುಳಿವು ಸಿಕ್ಕಿರಲಿಲ್ಲ. ಈ ನಡುವೆ ಫೆ.17ರಂದು ಮಂಡ್ಯ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಅಪ್ಪುಸ್ವಾಮಿ ಶವ ಪತ್ತೆಯಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸುತ್ತಿದ್ದರು.
* ಎಟಿಎಂನಿಂದ ಸಿಕ್ಕಿಬಿದ್ದ ಹಂತಕರು :
ಆರೋಪಿ ಜುನೈದ್ ತನ್ನ ಸ್ನೇಹಿತನಿಗೆ 40 ಸಾವಿರ ರೂ. ಸಾಲ ನೀಡಬೇಕಿತ್ತು. ಇದಕ್ಕಾಗಿ ಅಪ್ಪುಸ್ವಾಮಿ ಎಟಿಎಂ ನೀಡಿ ಹಣ ಡ್ರಾ ಮಾಡಿಕೊಳ್ಳುವಂತೆ ತಿಳಿಸಿದ್ದ. ಚರ್ಚ್ ಸ್ಟ್ರೀಟ್ನಲ್ಲಿ ಭಾನುವಾರ ಸಂಜೆ ಎಟಿಎಂವೊಂದರಲ್ಲಿ 5 ಸಾವಿರ ರೂ. ಡ್ರಾ ಮಾಡಿದ ವಿಷಯ ತಮಿಳುನಾಡು ಪೊಲೀಸರಿಂದ ತಿಳಿದ ನಂತರ ಕಬ್ಬನ್ಪಾರ್ಕ್ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಹಂತಕರು ಸಿಕ್ಕಿಬಿದ್ದರು. ಎಟಿಎಂನಿಂದ ಸುಮಾರು 1.50 ಲಕ್ಷ ರೂ.ವರೆಗೂ ಆರೋಪಿಗಳು ಡ್ರಾ ಮಾಡಿದ್ದಾರೆ.




0 Comments
You can be the first one to leave a comment.