ವೈದ್ಯೆಗೆ ವಂಚನೆ: ವಕೀಲನ ಪತ್ತೆಗೆ ಸಿಐಡಿ ಮನವಿ
ಬೆಂಗಳೂರು : ಕೇಸು ನಡೆಸುವುದಾಗಿ ನಂಬಿಸಿ ವೈದ್ಯರೊಬ್ಬರಿಂದ 14 ಲಕ್ಷ ರೂ. ಪಡೆದು ವಂಚಿಸಿ ಪರಾರಿಯಾಗಿರುವ ವಕೀಲನ ಪತ್ತೆಗೆ ಸಿಐಡಿ ಪೊಲೀಸರು ಮನವಿ ಮಾಡಿದ್ದಾರೆ.
ಮೈಸೂರಿನ ವಕೀಲ ಬಿ.ಎಲ್. ಶಿವರಾಂ ಆರೋಪಿ. ಮೈಸೂರಿನ ಗೋಕುಲ 3ನೇ ಹಂತ ನಿವಾಸಿ ಡಾ. ಇಂದಿರಾ ಆಮ್ಲ (82)ತಮ್ಮನ್ನು ಕಡ್ಡಾಯ ನಿವೃತ್ತಿಗೊಳಿಸಿದ್ದರ ಬಗ್ಗೆ ವಕೀಲ ಎಸ್.ಎಂ. ಬಾಬು ಎಂಬುವರ ಮೂಲಕ ದಾವೆ ಹೂಡಿದ್ದರು. ಆದರೆ, ಕೆಲ ತಾಂತ್ರಿಕ ಕಾರಣಗಳಿಂದ ಕೇಸು ವಜಾಗೊಂಡಿತ್ತು. ಇದರಿಂದ ಎಸ್.ಎಂ. ಬಾಬು ಮೇಲೆ ಗ್ರಾಹಕರ ನ್ಯಾಯಾಲಯದಲ್ಲಿ ಪರಿಹಾರಕ್ಕಾಗಿ ಕೇಸು ದಾಖಲಿಸಲು ವಕೀಲರಿಗಾಗಿ ಆಮ್ಲ ಹುಡುಕಾಟ ನಡೆಸುತ್ತಿದ್ದರು. ಆಗ ಪರಿಚಿತನಾದ ಬಿ.ಎಲ್. ಶಿವರಾಂ ಕೇಸು ನಡೆಸುವುದಾಗಿ ಹೇಳಿ, 15 ಸಾವಿರ ರೂ. ಪಡೆದಿದ್ದ. ಕೇಸು ದಾಖಲಿಸದೆ ಕಾಲಹರಣ ಮಾಡಿ, 2002ರ ನ.4 ರಂದು ವೈದ್ಯೆಯ ಸಹಿ ಹಾಕಿ ಪ್ರಕರಣ ದಾಖಲಿಸಿದ್ದ. 49 ಲಕ್ಷ ರೂ. ಪರಿಹಾರ ಮಂಜೂರಾಗಿದ್ದು, 14 ಲಕ್ಷ ರೂ. ಠೇವಣಿ ಇಡಬೇಕೆಂದು ನಂಬಿಸಿ ಚೆಕ್ಗಳನ್ನು ಪಡೆದಿದ್ದ. ಹಣ ನಗದು ಮಾಡಿಕೊಂಡು ನಾಪತ್ತೆಯಾದ. ಅನುಮಾನಗೊಂಡ ಆಮ್ಲ, ಬೆಂಗಳೂರಿಗೆ ಬಂದು ಗ್ರಾಹಕರ ನ್ಯಾಯಾಲಯದಲ್ಲಿ ವಿಚಾರಿಸಿದಾಗ ಅಂಥ ಯಾವುದೇ ಆದೇಶವಾಗಿಲ್ಲ ಎಂದು ತಿಳಿದು ಬಂತು. ಶಿವರಾಂ ವಾಸವಿದ್ದ ಮೈಸೂರು ವಿಜಯನಗರ 3ನೇ ಹಂತದಲ್ಲಿರುವ ನಿವಾಸಕ್ಕೆ ಬಂದಾಗ,ಆತ ಇರಲಿಲ್ಲ. ಇಂದಿರಾ ಆಮ್ಲ 2006 ರಲ್ಲಿ ಮೈಸೂರಿನ ವಿ.ವಿ. ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.




0 Comments
You can be the first one to leave a comment.